ನರಕದ ವೈತರಣಿ ನದಿ ಹೇಗಿರುತ್ತದೆ ಅಲ್ಲಿಗೆ ಯಾರನ್ನ ಕಳುಹಿಸುತ್ತಾರೆ! ಯಮರಾಜರು ಏನು ಹೇಳ್ತಾರೆ ಕೇಳಿ!

Written by Anand raj

Published on:

ಭೂಮಿ ಮೇಲೆ ಸಾಕಷ್ಟು ನದಿಗಳಿವೆ. ಪ್ರತಿಯೊಂದು ನದಿಯೂ ತನ್ನದೆ ವಿಶೇಷತೆಯಿಂದ ಕೂಡಿದೆ. ಆದ್ರೆ ಜನರು ವೃತರಣಿ ನದಿ ಹೆಸರು ಕೇಳಿದ್ರೆ ಭಯಗೊಳ್ತಾರೆ. ಯಾಕೆ ಎನ್ನುವ ವಿವರ ಇಲ್ಲಿದೆ.

ಹಿಂದೂ ಧರ್ಮದಲ್ಲಿ ನದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ದೇವತೆಗಳ ಸ್ವರೂಪವಾಗಿ ನದಿಗಳನ್ನು ಪೂಜಿಸಲಾಗುತ್ತದೆ. ನದಿಯ ನೀರನ್ನು ತೀರ್ಥವೆಂದು ಸ್ವೀಕರಿಸಲಾಗುತ್ತದೆ ಮತ್ತು ಅಂತಹ ನದಿಗಳಲ್ಲಿ ಸ್ನಾನ ಮಾಡುವುದರಿಂದ ನಾವು ಮಾಡಿದ ಪಾಪಗಳು ನಾಶವಾಗಿ ಮೋಕ್ಷ ಪ್ರಾಪ್ತಿಯಾಗುತ್ತದೆ, ಅದರಿಂದ ಎಷ್ಟೋ ರೋಗಗಳು ದೂರವಾಗುತ್ತದೆ ಎಂಬ ನಂಬಿಕೆಯಿದೆ. 

ಭಕ್ತರಿಗೆ ಪುಣ್ಯವನ್ನು ಪ್ರಾಪ್ತಿ ಮಾಡುವ, ಅವರ ಕಷ್ಟಗಳನ್ನು ದೂರಮಾಡುವ ನದಿ (River) ಗಳ ಬಗ್ಗೆ ನಮಗೆಲ್ಲ ತಿಳಿದಿದೆ. ಆದರೆ ಇಂದು ನಾವು ಹೇಳಲಿರುವ ಈ ನದಿ ತುಂಬ ಭಯಾನಕವಾದ ನದಿಯಾಗಿದೆ. ಇದರ ಬಗ್ಗೆ ಹಿಂದೂ (Hindu) ಧಾರ್ಮಿಕ ಗ್ರಂಥಗಳಲ್ಲಿ ಕೂಡ ವಿವರಣೆ ನೀಡಲಾಗಿದೆ. ಗರುಡ ಪುರಾಣ (Garuda Purana) ಮುಂತಾದ ಕೆಲವು ಪುರಾಣಗಳಲ್ಲಿಯೂ ಈ ರಹಸ್ಯಮಯ ನದಿಯ ಬಗ್ಗೆ ಉಲ್ಲೇಖಿಸಲಾಗಿದೆ.

ವೈತರಣಿ ಎಂಬ ರಹಸ್ಯಮಯ ನದಿ : ವೈತರಣಿ ಎಂಬ ನದಿ ಎಷ್ಟು ರಹಸ್ಯಮಯವೋ ಅಷ್ಟೇ ಭಯಾನಕ ಕೂಡ ಆಗಿದೆ. ಗರುಡ ಪುರಾಣದಲ್ಲಿ ಹೇಳಿರುವ ಪ್ರಕಾರ ವೈತರಣಿ ನದಿ ಯಮಲೋಕದಲ್ಲಿ ಹರಿಯುತ್ತದೆ. ಭೂಮಿಯ ಮೇಲಿರುವ ಎಲ್ಲ ನದಿಗಳಲ್ಲಿ ನೀರು ಹರಿದರೆ ಈ ನದಿಯಲ್ಲಿ ರಕ್ತ, ಕೀವು, ಮೂತ್ರ ಮತ್ತು ಇತರ ಕೊಳಕು ತುಂಬಿರುತ್ತದೆ ಎಂದು ಹೇಳಲಾಗುತ್ತದೆ. ಸಾವಿನ ನಂತರ ನಮ್ಮ ಆತ್ಮ ಯಮಲೋಕಕ್ಕೆ ಹೋಗುವಾಗ ಈ ನದಿಯನ್ನು ದಾಟಿಯೇ ಹೋಗಬೇಕು ಎಂದು ಪುರಾಣಗಳು ಹೇಳುತ್ತವೆ. ಈ ನದಿಯಲ್ಲಿ ಮಾಂಸಗಳನ್ನು ತಿನ್ನುವ ಭಯಾನಕವಾದ ಕ್ರಿಮಿಗಳು, ಮೊಸಳೆಗಳು, ರಣಹದ್ದುಗಳು ವಾಸಿಸುತ್ತವೆಯಂತೆ.

ಇಂತವರಿಗೆ ಕಷ್ಟ ಕೊಡುತ್ತಂತೆ ವೈತರಣಿ ನದಿ : ಪಾಪಿಗಳು ಸಾವಿನ ನಂತರ ಯಮಲೋಕಕ್ಕೆ ಹೋದಾಗ ಅಲ್ಲಿ ಆತನಿಗೆ ಚಿತ್ರಹಿಂಸೆ ನೀಡಲಾಗುತ್ತದೆ ಎಂದು ನಾವು ಪುರಾಣ, ಕಥೆಗಳಲ್ಲಿ ಕೇಳಿದ್ದೇವೆ. ಪಾಪಿಗಳಿಗೆ ಶಿಕ್ಷೆ ನೀಡೋದ್ರಲ್ಲಿ ವೈತರಣಿ ನದಿ ಕೂಡ  ಸೇರಿದೆ. ಪಾಪಿಗಳ ಮರಣದ ನಂತರ ಯಮದೂತರು ಪಾಪಿಯ ಆತ್ಮವನ್ನು ಹೊತ್ತುಕೊಂಡು ಈ ನದಿಯ ಬಳಿಗೆ ಹೋದಾಗ ನದಿ ಕುದಿಯಲು ಪ್ರಾರಂಭವಾಗುತ್ತದೆ. ಜೀವನದುದ್ದಕ್ಕೂ ಪಾಪ ಕರ್ಮಗಳನ್ನು ಮಾಡಿದವರು ಇಲ್ಲಿ ಬಂದಾಗ ವೈತರಣಿಯ ನೀರು ಕುದಿಯುತ್ತದೆ. ಅಂತಹ ಪಾಪಿಗಳಿಗೆ ವೈತರಣಿ ನದಿಯನ್ನು ದಾಟುವಾಗ ಬಹಳ ಕಷ್ಟ ಎದುರಿಸಬೇಕಾಗುತ್ತದೆ. ಪಾಪಿಗಳನ್ನು ನೋಡಿದಾಗ ಈ ನದಿ ಉಗ್ರವಾಗುತ್ತದೆ. ಜೀವನದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದವರು ಈ ನದಿಯನ್ನು ಸುಲಭವಾಗಿ ದಾಟಬಹುದು ಎನ್ನಲಾಗುತ್ತದೆ.

ವೈತರಣಿ ನದಿಯನ್ನು ಸುಲಭವಾಗಿ ದಾಟಬೇಕಂದ್ರೆ ಏನು ಮಾಡಬೇಕು? : ಎಷ್ಟೋ ಜನುಮದ ಪುಣ್ಯದ ಫಲದಿಂದ ಮನುಷ್ಯ ಜನ್ಮ ಸಿಗುತ್ತದೆ. ಮಾನವ ಜನ್ಮ ದೊಡ್ಡದು ಎಂದು ನಮ್ಮ ಹಿರಿಯರು ಆಗಾಗ ಹೇಳುತ್ತಿರುತ್ತಾರೆ. ಅಂತಹ ಮನುಷ್ಯ ಜನ್ಮದಲ್ಲಿ ಜನಿಸಿದಾಗಲೂ ಕೆಲವರು ಒಳ್ಳೆಯ ಕೆಲಸಗಳನ್ನು ಬಿಟ್ಟು ಪಾಪದ ಕೆಲಸಗಳಲ್ಲಿ ತೊಡಗುತ್ತಾರೆ. ತಿಳಿದು ತಿಳಿದೂ ಅನೇಕ ಪಾಪ ಕರ್ಮಗಳನ್ನು ಮಾಡುತ್ತಾರೆ. ಧರ್ಮ-ಕರ್ಮ, ದಾನ ಧರ್ಮಗಳನ್ನು ಮರೆಯುತ್ತಾರೆ. ಅಂತವರಿಗೆ ವೈತರಣಿ ನದಿಯಲ್ಲಿ ಶಿಕ್ಷೆ ತಪ್ಪಿದ್ದಲ್ಲ.

ವೈತರಣಿ ನದಿ ಯಾವಾಗಲೂ ಒಂದೇ ರೀತಿ ಇರುವುದಿಲ್ಲ ಎಂದು ಕೂಡ ಗರುಡ ಪುರಾಣದಲ್ಲಿ ಹೇಳಲಾಗಿದೆ. ಯಾರು ತಮ್ಮ ಜೀವಿತಾವಧಿಯಲ್ಲಿ ಈಶ್ವರನ ಮೇಲೆ ಭಕ್ತಿ, ನಿಷ್ಠೆಗಳನ್ನು ಹೊಂದಿರುತ್ತಾರೋ ಹಾಗೂ ಯಾರು ದಾನ ಧರ್ಮಗಳನ್ನು ಮಾಡುತ್ತಾರೋ ಅವರಿಗೆ ಯಮಲೋಕದ ಯಾತ್ರೆಯಲ್ಲಿ ಯಾವುದೇ ರೀತಿಯ ಕಷ್ಟಗಳು ಎದುರಾಗುವುದಿಲ್ಲ. ಹಾಗೆಯೇ ದಾನಗಳಲ್ಲಿ ಶ್ರೇಷ್ಠವಾದ ದಾನ ಎನಿಸಿಕೊಂಡಿರುವ ಗೋದಾನವನ್ನು ಮಾಡಿದರೂ ಪಾಪಗಳು ದೂರವಾಗುತ್ತದೆ. ಇಂತಹ ದಾನ ಧರ್ಮಗಳನ್ನು ಮಾಡುವವರನ್ನು ಯಮದೂತರು ದೋಣಿಯಲ್ಲಿ ಕರೆದುಕೊಂಡು ಹೋಗುತ್ತಾರೆ. ಪುಣ್ಯಕೆಲಸಗಳನ್ನು ಮಾಡಿದವರು ಬಂದಾಗ ವೈತರಣಿ ನದಿ ಶಾಂತವಾಗಿರುತ್ತದೆ. ಆದರೆ ಪಾಪಕರ್ಮಗಳನ್ನು ಮಾಡಿದವರು ಬಂದಾಗ ಅದು ಕುದಿಯುತ್ತದೆ ಎಂದು ಹೇಳಲಾಗುತ್ತದೆ.

Related Post

Leave a Comment