ಇದು ಹಬ್ಬಗಳ ಪರ್ವ, ಸಾಲು ಸಾಲು ಹಬ್ಬಗಳು ಒಂದೊಂದಾಗಿ ಬರುತ್ತಿರುವ ಈ ಸಂದರ್ಭದಲ್ಲಿ, ಪೂಜೆ, ವ್ರತಗಳು ಸಾಕಷ್ಟಿರುತ್ತವೆ. ಈ ವೇಳೆ ದೇವರ ಕೃಪೆಗೆ ಪಾತ್ರರಾಗಲು ಯಾವ ದಿಕ್ಕಿನಲ್ಲಿ ದೇವರ ಮೂರ್ತಿಯನ್ನಿಡಬೇಕು ಎಂಬುದು ತಿಳಿದುಕೊಳ್ಳುವುದು ಮುಖ್ಯ. ಅಷ್ಟೇ ಅಲ್ಲ, ಹೊಸದಾಗಿ ಮನೆಪ್ರವೇಶ ಮಾಡಿರುವವರು ವಿವಿಧ ದೇವರ ಮೂರ್ತಿ, ಭಾವಚಿತ್ರಗಳನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಒಳಿತು ಎಂಬುದನ್ನು ಯೋಚಿಸುತ್ತಿರುತ್ತಾರೆ. ಆದ್ದರಿಂದ ನಾವಿಂದು ನಿಮಗಾಗಿ ಸಹಾಯ ಮಾಡಲು ಬಂದಿದ್ದೇವೆ.
ಮನೆ ಕಟ್ಟುವಾಗ, ಸ್ಥಳದ ಕೊರತೆಯಿಂದಾಗಿ, ಅನೇಕ ಜನರು ಪ್ರತ್ಯೇಕ ದೇವರ ಕೋಣೆಯನ್ನು ನಿರ್ಲಕ್ಷಿಸುತ್ತಾರೆ ಆದರೆ ಇದನ್ನು ಕಡೆಗಣಿಸಬಾರದು. ದೇವರಿಗಾಗಿ ಒಂದು ಪ್ರತ್ಯೇಕ ಜಾಗವನ್ನು ಮಾಡಬೇಕು. ಇದು ಧನಾತ್ಮಕ ಶಕ್ತಿಯನ್ನು ಮನೆಯಲ್ಲಿ ನೆಲೆಸಲು ಸಹಾಯ ಮಾಡುವುದು. ಆ ಶಕ್ತಿಯು ನಮ್ಮ ಪರಿಸರ, ಮನಸ್ಸು, ದೇಹ ಮತ್ತು ಆತ್ಮಕ್ಕೆ ಉಲ್ಲಾಸವನ್ನು ನೀಡುತ್ತದೆ ಜೊತೆಗೆ ನಮ್ಮ ಕೆಲಸದ ದಕ್ಷತೆಯು ಹೆಚ್ಚಾಗುತ್ತದೆ ಮತ್ತು ಆದ್ದರಿಂದ ಪ್ರಗತಿ, ಸಮೃದ್ಧಿ ಮತ್ತು ಶಾಂತಿ ನೆಲೆಸುವುದು. ಒಂದು ವೇಳೆ ಕೋಣೆ ಇಲ್ಲವಾದರೆ, ದೇವರ ಮೂರ್ತಿ ಅಥವಾ ಫೋಟೋವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ತುಂಬಾ ಮುಖ್ಯ. ಇಲ್ಲವಾದಲ್ಲಿ ಕೆಲವೊಮ್ಮೆ ಇದು ವಾಸ್ತು ದೋಷಗಳಿಗೆ ಕಾರಣವಾಗಬಹುದು.
ಸಮಸ್ಯೆಗಳಿಲ್ಲದೇ ಜೀವನವು ಪೂರ್ಣಗೊಳ್ಳುವುದಿಲ್ಲ, ಆದರೆ ದೇವರ ಪ್ರಾರ್ಥನೆಯಿಂದ ಈ ಸಮಸ್ಯೆಗಳಿಂದ ಹೊರಬರಲು ಸಾಧ್ಯವಾಗುವುದು ಎಂಬುದನ್ನು ಮರೆಯಬಾರದು. ದೇವರ ಪ್ರತಿಮೆಗಳು ಅಥವಾ ಫೋಟೋಗಳನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳುವುದು, ಪೂಜೆ ಮಾಡುವುದರಿಂದ ಸಕಲ ಸಮಸ್ಯೆಗಳು ನಿವಾರಣೆಯಾಗುವುದು. ಯಾವುದೇ ಕೆಲಸಕ್ಕೆ ಹೋಗುವ ಮೊದಲು, ಕೈಗಳನ್ನು ಮುಚ್ಚಿಕೊಂಡು ಸಾಷ್ಟಾಂಗ ನಮಸ್ಕಾರ ಮಾಡಿ. ಇದರಿಂದ ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.
ಯಾವ ದೇವರಿಗೆ ಯಾವ ದಿಕ್ಕು ಸೂಕ್ತ?:
1. ವಿಘ್ನವಿನಾಶಕ ಗಣೇಶನ ಚಿತ್ರವನ್ನು ಉತ್ತರ ದಿಕ್ಕಿನಲ್ಲಿ ಇಡುವುದು ಒಳ್ಳೆಯದು, ಇದರಿಂದ ಜೀವನದಲ್ಲಿ ಬರುವ ಕಷ್ಟಗಳನ್ನು ಸಮರ್ಥವಾಗಿ ಎದುರಿಸಲು ಸಹಾಯವಾಗುವುದು.
2. ಈಶಾನ್ಯ ದಿಕ್ಕಿನಲ್ಲಿ ದುರ್ಗಾದೇವಿಯನ್ನು ಇಡಬೇಕು.
3. ಬುದ್ಧನ ಮೂರ್ತಿ ಅಥವಾ ಫೋಟೋವನ್ನು ಯಾವುದೇ ದಿಕ್ಕಿನಲ್ಲಾದರೂ ಇಡಬಹುದು. ಬುದ್ಧನಿಗೆ ಬುಧ ಗ್ರಹದ ಪ್ರಭಾವ ಹೆಚ್ಚಿದ್ದು, ಶಿಕ್ಷಣ ಮತ್ತು ವ್ಯಾಪಾರದಲ್ಲಿ ಪ್ರಗತಿಗೆ ಸಹಾಯ ಮಾಡುವುದು.
4. ಮನೆಯಲ್ಲಿ ಸಮೃದ್ಧಿ-ಸಂಪತ್ತು ನೆಲೆಸಲು, ಲಕ್ಷ್ಮಿಯ ಕೃಪಕಟಾಕ್ಷ ದೊರೆಯಲು ವಿಷ್ಣು ಲಕ್ಷ್ಮಿಯವರ ಫೋಟೋವನ್ನು ಈಶಾನ್ಯ ದಿಕ್ಕಿನ ಗೋಡೆಯ ಮೇಲೆ ಹಾಕಬಹುದು. ಇದರಿಂದ ಗುರುಗ್ರಹದ ಶಕ್ತಿ ಹೆಚ್ಚಾಗಿ ಸಂಪತ್ತು ಹೆಚ್ಚಾಗುವುದು.
5. ಸಾಯಿಬಾಬಾ ಫೋಟೋವನ್ನು ವಾಯುವ್ಯ ದಿಕ್ಕಿನಲ್ಲಿ ಹಾಕಬೇಕು. ಸಾಯಿಬಾಬಾ ಗುರು ಗ್ರಹದ ಶಕ್ತಿಯನ್ನು ಹೆಚ್ಚಿಸುವುದರಿಂದ ಹಣಕಾಸು ಮತ್ತು ಬುದ್ಧಿವಂತಿಕೆ ವೃದ್ಧಿಯಾಗುವುದು.
6. ಹನುಮನ ಫೋಟೋವನ್ನು ಆಗ್ನೇಯದಲ್ಲಿ ಹಾಕಬೇಕು. ಹೀಗೆ ಮಾಡುವುದರಿಂದ ಮಂಗಳನ ಪ್ರಾಬಲ್ಯವನ್ನು ಹೆಚ್ಚಾಗಿ, ಶಕ್ತಿ ಹಾಗೂ ಸಂತೋಷ ವೃದ್ಧಿಗೆ ಸಹಾಯವಾಗುವುದು.
7. ಜಗತ್ತು ಕಂಡ ಮೊದಲ ಪ್ರೇಮಿಗಳಾದ ರಾಧಾ ಕೃಷ್ಣರ ಫೋಟೋ ಈಶಾನ್ಯದಲ್ಲಿರಬೇಕು, ಇದು ಚಂದ್ರ ಮತ್ತು ಶುಕ್ರ ಶಕ್ತಿಯನ್ನು ಹೆಚ್ಚಿಸಿ, ಪ್ರೀತಿ ಮತ್ತು ಶಾಂತತೆಯನ್ನು ನೆಲೆಯೂರುವಂತೆ ಮಾಡುತ್ತದೆ.
8. ಶಿವ ಪಾರ್ವತಿಯ ಪ್ರತಿಮೆ ಅಥವಾ ಫೋಟೋವನ್ನು ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಇದು ಚಂದ್ರನ ಶಕ್ತಿಯನ್ನು ಆಹ್ವಾನಿಸಿ, ಹಣದ ಹರಿವನ್ನು ಹೆಚ್ಚಿಸುವುದು.